ವಾಸ್ತು-ಜ್ಯೋತಿಷ್ಯಕ್ಕಾಗಿ ಬಾವಿ ಮುಚ್ಚಿಸಿಲ್ಲ, ಅದೊಂದು ಸುಳ್ಳು ಆರೋಪ: ಶಾಸಕ ಗೋಪಾಲಕೃಷ್ಣ ಬೇಳೂರು ಸ್ಪಷ್ಟನೆ - Kannada global

Breaking

Wednesday, August 12, 2026

ವಾಸ್ತು-ಜ್ಯೋತಿಷ್ಯಕ್ಕಾಗಿ ಬಾವಿ ಮುಚ್ಚಿಸಿಲ್ಲ, ಅದೊಂದು ಸುಳ್ಳು ಆರೋಪ: ಶಾಸಕ ಗೋಪಾಲಕೃಷ್ಣ ಬೇಳೂರು ಸ್ಪಷ್ಟನೆ

ಶಿವಮೊಗ್ಗ:ಸಚಿವ ಸ್ಥಾನದ ಆಕಾಂಕ್ಷೆಯಿಂದ ವಾಸ್ತು ಅಥವಾ ಜ್ಯೋತಿಷ್ಯದ ಕಾರಣಕ್ಕೆ ಮನೆ ಪಕ್ಕದಲ್ಲಿದ್ದ ಬಾವಿಯನ್ನು ಮುಚ್ಚಿಸಲಾಗಿದೆ ಎಂಬ ಮಾಜಿ ಶಾಸಕ ಹರತಾಳು ಹಾಲಪ್ಪ ಅವರ ಆರೋಪ ಸಂಪೂರ್ಣ ನಿರಾಧಾರ ಹಾಗೂ ಸತ್ಯಕ್ಕೆ ದೂರವಾದದ್ದು ಎಂದು ಸಾಗರ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿರುಗೇಟು ನೀಡಿದ್ದಾರೆ.

ಸಾಗರ ನಗರಸಭೆ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಕುರಿತು ಸತ್ಯಾಸತ್ಯತೆಯನ್ನು ವಿವರಿಸಿದರು.

"ವಿವಾದಕ್ಕೀಡಾಗಿರುವ ಬಾವಿ ನನ್ನ ಖಾಸಗಿ ಸ್ವತ್ತಿನಲ್ಲಿ ಬರುವುದೇ ಇಲ್ಲ. ಆ ಜಾಗದ ಮಾಲೀಕರು, ಬಾವಿಯ ಸುತ್ತಮುತ್ತ ಜಾನುವಾರುಗಳು ಹಾಗೂ ಕೋಳಿಗಳು ಬಿದ್ದು ತೊಂದರೆಯಾಗುತ್ತಿರುವುದನ್ನು ಗಮನಿಸಿ, ಅದನ್ನು ಮುಚ್ಚಿಸಿಕೊಡುವಂತೆ ನಗರಸಭೆಗೆ ಅಧಿಕೃತವಾಗಿ ಮನವಿ ಸಲ್ಲಿಸಿದ್ದರು. ಸಾರ್ವಜನಿಕರ ಹಿತದೃಷ್ಟಿಯಿಂದ ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಬಾವಿಯನ್ನು ಮುಚ್ಚಿದ್ದಾರೆಯೇ ಹೊರತು, ಇದರಲ್ಲಿ ಯಾವುದೇ ವಾಸ್ತು, ಜ್ಯೋತಿಷ್ಯ ಅಥವಾ ಸಚಿವ ಸ್ಥಾನದ ಗಿಮಿಕ್ ಇಲ್ಲ" ಎಂದು ಬೇಳೂರು ಸ್ಪಷ್ಟಪಡಿಸಿದರು.

ಪರ್ಯಾಯ ಬಾವಿ ನಿರ್ಮಾಣ:
ಬಾವಿ ಮುಚ್ಚಿದ್ದರಿಂದ ಸ್ಥಳೀಯ ಸಾರ್ವಜನಿಕರಿಗೆ ಕುಡಿಯುವ ನೀರಿನ ಅಭಾವ ಉಂಟಾಗಬಾರದು ಎಂಬ ಕಾಳಜಿಯಿಂದ, ತಮ್ಮ ಸ್ವಂತ ವೆಚ್ಚದಲ್ಲಿಯೇ ಪರ್ಯಾಯವಾಗಿ ಹೊಸ ಬಾವಿಯೊಂದನ್ನು ತೋಡಿಸಿಕೊಡಲಾಗಿದೆ ಎಂದೂ ಅವರು ಇದೇ ವೇಳೆ ಮಾಹಿತಿ ನೀಡಿದರು.

ವಿರೋಧಿಗಳ ಟೀಕೆಗೆ ಕ್ಯಾರೇ ಎನ್ನಲ್ಲ:
"ನಾನು ಯಾವತ್ತೂ ಪ್ರಮಾಣಿಕವಾಗಿ ಜನಸೇವೆ ಮಾಡುವವನು. ಹಿಂದೆ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದಾಗ ಏನಾಯಿತು ಎಂಬುದು ಕ್ಷೇತ್ರದ ಜನತೆಗೆ ಚೆನ್ನಾಗಿ ತಿಳಿದಿದೆ. ಎದುರಾಳಿಗಳ ರಾಜಕೀಯ ಪ್ರೇರಿತ ಟೀಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸೇವೆಯೇ ನನ್ನ ಮೊದಲ ಆದ್ಯತೆ" ಎಂದು ಅವರು ಪ್ರತಿಪಾದಿಸಿದರು.


No comments:

Post a Comment

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್