ಭಾನುವಾರದ ವಿಶೇಷ:ಟಿಆರ್‌ಪಿ ಗದ್ದಲದ ನಡುವೆ 'ಹಳೇ ಕಾಲದ ವಾಹಿನಿ'ಯನ್ನೇಕೆ ಇಂದಿಗೂ ಗೌರವದಿಂದ ನೋಡ್ತಾರೆ?-ಸೌಖ್ಯ ಬಿ - Kannada global

Breaking

Saturday, July 25, 2026

ಭಾನುವಾರದ ವಿಶೇಷ:ಟಿಆರ್‌ಪಿ ಗದ್ದಲದ ನಡುವೆ 'ಹಳೇ ಕಾಲದ ವಾಹಿನಿ'ಯನ್ನೇಕೆ ಇಂದಿಗೂ ಗೌರವದಿಂದ ನೋಡ್ತಾರೆ?-ಸೌಖ್ಯ ಬಿ

ನಾನೊಬ್ಬಳು ಚಂದನ ವಾಹಿನಿಯ ಅಭಿಮಾನಿ...

ನನ್ನ ಮನೆಯಲ್ಲಿ ಎಲ್ಲರೂ ನನ್ನನ್ನ ಮೂದಲಿಸುತ್ತಾರೆ. "ಇದೆಂತ ಮಾರಾಯ್ತಿ, ಹಳೇ ಕಾಲದ ವಾಹಿನಿನೆ ನಿಂಗೆ ಇಷ್ಟನಾ?" ಎಂದು ಆಗಾಗ ಮೂದಲಿಸುತ್ತಾರೆ.

ಆದರೆ ಇಂದು ನಾನು ಬರೆಯುತ್ತಿರುವ ಈ ಲೇಖನಕ್ಕೆ ಪ್ರೇರಣೆಯೇ "ಹಳೇ ಕಾಲದ ವಾಹಿನಿ" ಎಂದು ಅವರಿಗೆ ತಿಳಿದಿಲ್ಲ.

"ಹಳೇ ಕಾಲದ್ದು" ಅಂತ ಜನ ಹೇಳಿದ್ರೂ ಡಿ.ಡಿ. ಚಂದನ ನಮ್ಮ ಬೇರುಗಳನ್ನ ನೆನಪಿಸುವ ವಾಹಿನಿ ಅಲ್ವಾ

ಟೆಕ್ನಾಲಜಿ ಯುಗದಲ್ಲಿ ನೂರು ಖಾಸಗಿ ವಾಹಿನಿಗಳ ನಡುವೆಯೂ ಇಂದಿಗೂ ಕರ್ನಾಟಕದ ಪ್ರತಿ ಮನೆಯಲ್ಲೂ ಗೌರವದಿಂದ ನೋಡುವ ವಾಹಿನಿ ಎಂದರೆ ಅದು *ಡಿ. ಡಿ. ಚಂದನ.ಇಂದಿಗೂ ಕನ್ನಡವನ್ನು ಉಳಿಸಿ ಬೆಳೆಸುತ್ತಿರುವ ಏಕೈಕ ಕನ್ನಡ ವಾಹಿನಿ ಇದಾಗಿದೆ. ಕೇವಲ ಮನೋರಂಜನೆಯ ವಾಹಿನಿಯಲ್ಲ. ಇದು ಕನ್ನಡಿಗರ ಧ್ವನಿ, ನಮ್ಮ ಸಂಸ್ಕೃತಿಯ ಕನ್ನಡಿ.

ಸಂಸ್ಕೃತಿಯ ಪರಿಮಳದೊಂದಿಗೆ ಹುಟ್ಟಿದ ವಾಹಿನಿ

1991 ರ ಆಗಸ್ಟ್ 15 ರಂದು ಪ್ರಾರಂಭವಾದ ಡಿ. ಡಿ. ಚಂದನವು ದೂರದರ್ಶನದ ಪ್ರಾದೇಶಿಕ ವಾಹಿನಿಯಾಗಿದೆ. "ಚಂದನ" ಎಂಬ ಹೆಸರೇ ಕರ್ನಾಟಕದ ಶ್ರೀಮಂತಿಕೆ ಮತ್ತು ಪರಂಪರೆಯನ್ನು ಹೇಳುತ್ತದೆ. ಆರಂಭದಲ್ಲಿ ಡಿ. ಡಿ. ನ್ಯಾಷನಲ್‌ನ ಭಾಗವಾಗಿದ್ದ ಈ ವಾಹಿನಿ, ನಂತರ 24 ಗಂಟೆಗಳ ಪ್ರತ್ಯೇಕ ಕನ್ನಡ ವಾಹಿನಿಯಾಗಿ ಬೆಳೆದು ಇಂದು ಕೋಟ್ಯಾಂತರ ಜನರ ಮನೆ ಮಾತಾಗಿದೆ.

ಇದು ಜನಮನ, ಕಲಾಮನ, ಭಾವಮನ ಮತ್ತು ಜೀವನಮನ ವನ್ನು ಒಟ್ಟಿಗೆ ಬೆಸೆಯುವ ವಾಹಿನಿ.

ಜನರ ಸೇವೆಗಾಗಿಯೇ ಮೀಸಲಾದ ವೇದಿಕೆ

ಖಾಸಗಿ ವಾಹಿನಿಗಳು ಜಾಹೀರಾತು ಮತ್ತು ಟಿ.ಆರ್.ಪಿಗಾಗಿ ಓಡುವಾಗ, ಡಿ. ಡಿ. ಚಂದನ ತನ್ನ ಮೂಲ ಉದ್ದೇಶವಾದ ಮಾಹಿತಿ, ಶಿಕ್ಷಣ ಮತ್ತು ಮನೋರಂಜನೆಗೆ ಬದ್ಧವಾಗಿದೆ.

ಉಚಿತವಾಗಿ ಆಂಟೆನಾ ಮೂಲಕವೂ ಲಭ್ಯವಾಗುವುದರಿಂದ ಹಳ್ಳಿ-ಪಟ್ಟಣ ಭೇದವಿಲ್ಲದೆ ಎಲ್ಲರಿಗೂ ತಲುಪುತ್ತದೆ. ಶುದ್ಧ ಕನ್ನಡದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ನಮ್ಮ ಭಾಷೆಯನ್ನು ಬೆಳೆಸುವ ಕೆಲಸ ಮಾಡುತ್ತಿದೆ.

ಎಲ್ಲಾ ವರ್ಗಕ್ಕೂ ಉಪಯುಕ್ತ ಕಾರ್ಯಕ್ರಮಗಳು

ಡಿ. ಡಿ. ಚಂದನದ ಬಲವೇ ಅದರ ವೈವಿಧ್ಯಮಯ ಕಾರ್ಯಕ್ರಮಗಳು.

ರೈತರಿಗಾಗಿ "ಕೃಷಿ ದರ್ಶನ", ಮಕ್ಕಳಿಗಾಗಿ "ಶಾಲಾ ಪಾಠ" ಮತ್ತು "ಥಟ್ ಅಂತ ಹೇಳಿ", ಮಹಿಳೆಯರಿಗಾಗಿ "ಮಹಿಳಾ ಸಂಗಮ", ಜ್ಞಾನಕ್ಕಾಗಿ "ಅರಿವು", ನಮ್ಮ ಬೇರುಗಳಿಗಾಗಿ "ಜಾನಪದ ಲೋಕ" ಮತ್ತು "ಸುಗಮ ಸಂಗೀತ" ಕಾರ್ಯಕ್ರಮಗಳು ವಾಹಿನಿಯ ಮಣಿಗಳಾಗಿವೆ.

ವಿಶೇಷವಾಗಿ "ಥಟ್ ಅಂತ ಹೇಳಿ" ಕಾರ್ಯಕ್ರಮವು ಮಕ್ಕಳಲ್ಲಿ ಸಾಮಾನ್ಯ ಜ್ಞಾನ, ಭಾಷಾ ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜೊತೆಗೆ ಸಮಯಕ್ಕೆ ಸರಿಯಾದ ಸುದ್ದಿ, ಧಾರಾವಾಹಿ, ಆರೋಗ್ಯ ಮತ್ತು ಸಾಹಿತ್ಯ ಕಾರ್ಯಕ್ರಮಗಳಿಂದ ಪ್ರತಿಯೊಬ್ಬರ ಅಗತ್ಯವನ್ನೂ ಇದು ಪೂರೈಸುತ್ತದೆ. ಕೋವಿಡ್ ಸಂದರ್ಭದಲ್ಲಿ ಶಾಲಾ ತರಗತಿಗಳನ್ನು ನೇರಪ್ರಸಾರ ಮಾಡಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗಿತ್ತು.

ನಮ್ಮ ನೆಲದ ಕಥೆ ಹೇಳುವ ಕಾವಲುಗಾರ

"ನಮ್ಮ ಪರಂಪರೆಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ" ಎಂಬಂತೆ ಡಿ. ಡಿ. ಚಂದನ ಕೆಲಸ ಮಾಡುತ್ತಿದೆ. ಯಕ್ಷಗಾನದಿಂದ ಹಿಡಿದು ಕವಿಗೋಷ್ಠಿಯವರೆಗೆ, ಸ್ವಾತಂತ್ರ್ಯ ದಿನಾಚರಣೆಯ ಗಾಂಭೀರ್ಯದಿಂದ ಹಿಡಿದು ಗ್ರಾಮೀಣ ಕಲೆಗಳವರೆಗೆ ಎಲ್ಲವನ್ನೂ ಇಡೀ ದೇಶಕ್ಕೆ ಪರಿಚಯಿಸುವ ಕೆಲಸವನ್ನು ಈ ವಾಹಿನಿ ಮಾಡುತ್ತಿದೆ. ವಿವಿಧತೆಯಲ್ಲಿ ಏಕತೆಯ ಸಂದೇಶವನ್ನು ಸಾರುವ ನಿಜವಾದ ಸಾಂಸ್ಕೃತಿಕ ವಾಹಿನಿ ಇದು.

ಇಂದು ಡಿ. ಡಿ. ಚಂದನ ಕೇವಲ ಒಂದು ವಾಹಿನಿಯಾಗಿ ಉಳಿದಿಲ್ಲ. ಇದು ಪ್ರತಿ ಮನೆಯ ಶಿಕ್ಷಕ, ಸ್ನೇಹಿತ ಮತ್ತು ಮಾರ್ಗದರ್ಶಿ. ನಮ್ಮ ಮಣ್ಣಿನ ಸೊಗಸನ್ನು, ನಮ್ಮ ಜನರ ಕಥೆಯನ್ನು, ನಮ್ಮ ಭಾಷೆಯ ಹೆಮ್ಮೆಯನ್ನು ಹೇಳುವ ಸೇತುವೆ.

ಖಾಸಗಿ ವಾಹಿನಿಗಳ ಜೋರಾದ ಸದ್ದಿನ ಮಧ್ಯೆಯೂ ತನ್ನ ಶಾಂತ, ಗಂಭೀರ ಮತ್ತು ವಿಶ್ವಾಸಾರ್ಹ ಧ್ವನಿಯಿಂದ ಜನರ ಮನ ಗೆದ್ದಿರುವುದು ಡಿ. ಡಿ. ಚಂದನದ ದೊಡ್ಡ ಸಾಧನೆ. ಭವಿಷ್ಯದಲ್ಲೂ ಈ ವಾಹಿನಿ ಹೀಗೆ "ಜನರಿಗಾಗಿ, ಜನರಿಂದ" ಎಂಬ ತತ್ವದೊಂದಿಗೆ ಬೆಳೆಯಲಿ. ಕನ್ನಡ ನಾಡಿನ ಪ್ರತಿ ಮೂಲೆಯಲ್ಲೂ ಚಂದನದ ಪರಿಮಳ ಹರಡಲಿ.

ನಾನೊಬ್ಬಳು ಅಭಿಮಾನಿಯಾಗಿ ಹೆಮ್ಮೆಯಿಂದ ಹೇಳುತ್ತೇನೆ,

"ಜನರ ವಾಹಿನಿ - ನಮ್ಮ ವಾಹಿನಿ - ಡಿ. ಡಿ. ಚಂದನ"

"ಕನ್ನಡದ ಕಣಿವೆಯಲ್ಲಿ ಹರಿಯುವ ಅಮೃತಧಾರೆ - ಡಿ. ಡಿ. ಚಂದನ"

ಸೌಖ್ಯ ಬಿ

ಸ್ವತಂತ್ರ ಬರಹಗಾರ್ತಿ

ಸೊರಬ (ತಾ) ಶಿವಮೊಗ್ಗ (ಜಿ)

ಸಂಪಾದಕೀಯ ನುಡಿ: ಅಬ್ಬರವಿಲ್ಲದ ಆತ್ಮೀಯತೆ – ಪ್ರಸಾರ ಧರ್ಮದ ವಿಶ್ವಾಸಾರ್ಹ ಚಂದನ

ಇಂದಿನ ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ದಿನಕ್ಕೊಂದು ಹೊಸ ಚಾನೆಲ್ ಹುಟ್ಟಿಕೊಳ್ಳುತ್ತಿದ್ದು, ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು ದೊಡ್ಡ ಸದ್ದು, ಬ್ರೇಕಿಂಗ್ ನ್ಯೂಸ್‌ಗಳ ಧಾವಂತ ಹಾಗೂ ಟಿಆರ್‌ಪಿ ಪ್ರೇರಿತ ಸೆನ್ಸೇಷನಲಿಸಂ ದಿನನಿತ್ಯದ ಕಥೆಯಾಗಿದೆ. ಇಂತಹ ರಭಸದ ಓಟದಲ್ಲಿ 'ಮಾಧ್ಯಮ ಧರ್ಮ' ಮತ್ತು ವಿಶ್ವಾಸಾರ್ಹತೆ ಎಲ್ಲೋ ಕಳೆದುಹೋಗುತ್ತಿರುವಾಗ, ಕನ್ನಡಿಗರ ಪಾಲಿಗೆ ಶಾಂತ ಹಾಗೂ ಪ್ರಬುದ್ಧ ತಟದಂತೆ ನಿಲ್ಲುವುದು ಪ್ರಸಾರ ಭಾರತಿಯ ಹೆಮ್ಮೆಯ 'ಡಿ.ಡಿ. ಚಂದನ'. ಲೇಖಕಿ ಸೊರಬದ ಸೌಖ್ಯ ಬಿ. ಅವರು ವ್ಯಕ್ತಪಡಿಸಿರುವ ಭಾವನೆಗಳು, ಕೇವಲ ಒಬ್ಬ ಅಭಿಮಾನಿಯ ಮಾತುಗಳಷ್ಟೇ ಅಲ್ಲದೆ, ಪ್ರತಿಯೊಬ್ಬ ಕನ್ನಡಿಗನ ಸಾಂಸ್ಕೃತಿಕ ಅಸ್ಮಿತೆಯ ಪ್ರತಿಬಿಂಬವಾಗಿವೆ. "ಹಳೇ ಕಾಲದ ವಾಹಿನಿ" ಎಂಬ ಹಣೆಪಟ್ಟಿಯನ್ನು ಬದಿಗೊತ್ತಿ ನೋಡಿದರೆ, ಚಂದನವು ಮೂರು ದಶಕಗಳಿಂದ ಸದ್ದಿಲ್ಲದೆ ಮಾಡುತ್ತಿರುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವೆಯ ಹಿರಿಮೆ ಅರಿವಾಗುತ್ತದೆ.

ಖಾಸಗಿ ವಾಹಿನಿಗಳಿಗೆ ಮನೋರಂಜನೆಯು ವಾಣಿಜ್ಯ ಲಾಭದ ಸರಕಾಗಿದ್ದರೆ, ಚಂದನಕ್ಕೆ ಅದು ಜನರಿಗೆ ಶಿಕ್ಷಣ, ಮಾಹಿತಿ ಹಾಗೂ ಸಂಸ್ಕೃತಿಯನ್ನು ನೀಡುವ ಪವಿತ್ರ ಕರ್ತವ್ಯವಾಗಿದೆ. ನಕಲಿ ಸುದ್ದಿಗಳ (Fake News) ಹಾವಳಿ ಹೆಚ್ಚಿರುವ ಈ ಕಾಲಘಟ್ಟದಲ್ಲಿ, ಚಂದನದ ವಾರ್ತೆಗಳೆಂದರೆ ಅದು ಜನಸಾಮಾನ್ಯರಿಗೆ ಅತ್ಯಂತ ಅಧಿಕೃತ ಹಾಗೂ ಸತ್ಯಸಂಧ ಮಾಹಿತಿಯ ಮೂಲವಾಗಿದೆ. ರಾಷ್ಟ್ರೀಯ ಮಟ್ಟದ ಘಟನೆಗಳು, ಗಣರಾಜ್ಯೋತ್ಸವ, ರಾಜ್ಯೋತ್ಸವದಂತಹ ಸಾಂಸ್ಕೃತಿಕ ವೈಭವ ಮತ್ತು ಭಾರತದ ವೈವಿಧ್ಯಮಯ ಕಲಾ ಪರಂಪರೆಯನ್ನು ಕನ್ನಡಿಗರ ಹೊಸ್ತಿಲಿಗೆ ತಂದ ಪ್ರಮುಖ ಶ್ರೇಯಸ್ಸು ಈ ಸಂಸ್ಥೆಗೆ ಸಲ್ಲುತ್ತದೆ. ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗದೆ, ಉಚಿತ ಆಂಟೆನಾ ಹಾಗೂ ಡಿಡಿ ಫ್ರೀ ಡಿಶ್ ಮೂಲಕ ರಾಜ್ಯದ ಪ್ರತಿಯೊಂದು ಗ್ರಾಮೀಣ ಭಾಗಕ್ಕೂ ಯಾವುದೇ ಶುಲ್ಕವಿಲ್ಲದೆ ತಲುಪುತ್ತಿರುವುದು ಇದರ ಸಾಮಾಜಿಕ ಬದ್ಧತೆಗೆ ಹಿಡಿದ ಕನ್ನಡಿ.

ಇದರ ಕಾರ್ಯಕ್ರಮಗಳ ವೈವಿಧ್ಯತೆಯೇ ಇದರ ನಿಜವಾದ ಶಕ್ತಿ. 'ಕೃಷಿ ದರ್ಶನ'ದ ಮೂಲಕ ರೈತನಿಗೆ ಆಧುನಿಕ ಕೃಷಿ ಮಾಹಿತಿ ನೀಡುವುದು, 'ಥಟ್ ಅಂತ ಹೇಳಿ' ಮೂಲಕ ಮಕ್ಕಳಲ್ಲಿ ಜ್ಞಾನ ತೃಷ್ಣೆಯನ್ನು ಬೆಳೆಸುವುದು ಹಾಗೂ ಯಕ್ಷಗಾನ, ಜಾನಪದ, ಸುಗಮ ಸಂಗೀತಗಳಿಗೆ ಆದ್ಯತೆ ನೀಡಿ ನಮ್ಮ ಮೂಲ ಬೇರುಗಳನ್ನು ಕಾಯ್ದುಕೊಳ್ಳುವುದು ಚಂದನದ ಅನನ್ಯತೆ. ವಿಶೇಷವಾಗಿ ಕೋವಿಡ್‌ನಂತಹ ಸಂಕಷ್ಟದ ಸಮಯದಲ್ಲಿ 'ಶಾಲಾ ಪಾಠ'ಗಳನ್ನು ನೇರಪ್ರಸಾರ ಮಾಡುವ ಮೂಲಕ ಲಕ್ಷಾಂತರ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೆಳಕಾಗಿದ್ದನ್ನು ಸಮಾಜ ಎಂದಿಗೂ ಮರೆಯಲು ಸಾಧ್ಯವಿಲ್ಲ. ಜಾಹೀರಾತುದಾರರ ಒತ್ತಡಕ್ಕೆ ಮಣಿಯದೆ, ಭಾರತೀಯ ಸಂವಿಧಾನವು ಪ್ರತಿಪಾದಿಸುವ ಸಾಮಾಜಿಕ ಜಾಗೃತಿ ಹಾಗೂ ಸಂಸ್ಕೃತಿ ರಕ್ಷಣೆಯ ಮೂಲಭೂತ ಕರ್ತವ್ಯಕ್ಕೆ ಚಂದನ ಸಂಪೂರ್ಣವಾಗಿ ಬದ್ಧವಾಗಿದೆ.

ಇಂದಿನ ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಚಂದನವು ತನ್ನನ್ನು ತಾನು ಬದಲಾಯಿಸಿಕೊಂಡಿದ್ದು, ಯೂಟ್ಯೂಬ್ ಮತ್ತು ಪ್ರಸಾರ ಭಾರತಿಯ ಡಿಜಿಟಲ್ ವೇದಿಕೆಗಳ (OTT) ಮೂಲಕ ಜಾಗತಿಕ ಮಟ್ಟದಲ್ಲೂ ವಿಶ್ವಕನ್ನಡಿಗರನ್ನು ತಲುಪುತ್ತಿದೆ. ಕೃತಕತೆ ಇಲ್ಲದ ಶುದ್ಧ ಭಾಷೆಯ ಬಳಕೆಯೊಂದಿಗೆ, ಸಭ್ಯತೆಯ ಗಡಿ ದಾಟದ ನಿರೂಪಣೆ ಈ ವಾಹಿನಿಗೆ ಗಾಂಭೀರ್ಯವನ್ನು ತಂದುಕೊಟ್ಟಿದೆ. ಹೊಸ ತಂತ್ರಜ್ಞಾನವನ್ನು ಸ್ವೀಕರಿಸುವುದು ತಪ್ಪಲ್ಲ, ಆದರೆ ಹೊಸದರ ವ್ಯಾಮೋಹದಲ್ಲಿ ನಮ್ಮ ಸಂಸ್ಕೃತಿ ಮತ್ತು ಶುದ್ಧ ಭಾಷೆಯನ್ನು ಕಾಪಾಡುತ್ತಿರುವ ಸಂಸ್ಥೆಗಳನ್ನು ಕಡೆಗಣಿಸುವುದು ಸೂಕ್ತವಲ್ಲ. ಖಾಸಗಿ ಮಾಧ್ಯಮಗಳ ಜೋರಾದ ಅಬ್ಬರದ ನಡುವೆಯೂ, ತನ್ನ ಪ್ರಶಾಂತ ಹಾಗೂ ವಿಶ್ವಾಸಾರ್ಹ ಧ್ವನಿಯಿಂದ ಕನ್ನಡಿಗರ ಮನಸ್ಸನ್ನು ಗೆದ್ದಿರುವ ಡಿ.ಡಿ. ಚಂದನ ನಿಜಕ್ಕೂ ನಮ್ಮ ನಾಡಿನ ಸಾಂಸ್ಕೃತಿಕ 'ಅಮೃತಧಾರೆ'.

- ಚರಣ್ ರಾಜ್ ಸಂಪಾದಕರು, ಕನ್ನಡ ಗ್ಲೋಬಲ್ ನ್ಯೂಸ್ 

No comments:

Post a Comment

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್