ಶಿವಮೊಗ್ಗ:ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಆನವೇರಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ಹಿನ್ನೆಲೆ:
ಶಾಲೆಯ 9ನೇ ತರಗತಿಯ ವಿದ್ಯಾರ್ಥಿಯಾದ ಸುಮಂತ್ ಎಂಬಾತನ ಮೇಲೆಯೇ ಈ ಹಲ್ಲೆ ನಡೆದಿದೆ. ಮೂಲಗಳ ಪ್ರಕಾರ, ವಿದ್ಯಾರ್ಥಿಯೊಬ್ಬಳು ತನ್ನ ಸಹಪಾಠಿ ಹುಡುಗರು ತನಗೆ ತೊಂದರೆ ಕೊಡುತ್ತಿದ್ದಾರೆ ಎಂದು ಕಂಪ್ಯೂಟರ್ ಶಿಕ್ಷಕನ ಬಳಿ ದೂರು ನೀಡಿದ್ದಳು. ಇದರೊಂದಿಗೆ, ಕಾಗದದ ತುಂಡೊಂದನ್ನು ಕಸದ ಬುಟ್ಟಿಗೆ ಎಸೆಯುವಾಗ ಅದು ಅಕಸ್ಮಾತ್ತಾಗಿ ವಿದ್ಯಾರ್ಥಿನಿಯೊಬ್ಬಳಿಗೆ ತಗುಲಿತ್ತು ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಂಪ್ಯೂಟರ್ ಶಿಕ್ಷಕನು ವಿದ್ಯಾರ್ಥಿ ಸುಮಂತ್ನಿಗೆ ತೀವ್ರವಾಗಿ ಥಳಿಸಿದ್ದಾನೆ.
ಅಸ್ವಸ್ಥಗೊಂಡ ವಿದ್ಯಾರ್ಥಿ:
ಶಿಕ್ಷಕನ ಅಮಾನವೀಯ ಹೊಡೆತದಿಂದಾಗಿ ಸುಮಂತ್ ತೀವ್ರವಾಗಿ ಗಾಯಗೊಂಡಿದ್ದು, ಮೈಮೇಲೆ ರಕ್ತ ಹೆಪ್ಪುಗಟ್ಟಿ ತೀವ್ರ ಜ್ವರದಿಂದ ಬಳಲುತ್ತಿದ್ದಾನೆ. ಇದರಿಂದ ಭಯಭೀತನಾದ ಬಾಲಕನು, ತಾನು ಇನ್ನು ಮುಂದೆ ಈ ವಸತಿ ಶಾಲೆಯಲ್ಲಿ ಇರುವುದಿಲ್ಲ, ಬಂದು ತನ್ನನ್ನು ಕರೆದುಕೊಂಡು ಹೋಗುವಂತೆ ಪೋಷಕರಿಗೆ ತಿಳಿಸಿದ್ದಾನೆ.
ತಕ್ಷಣವೇ ಶಾಲೆಗೆ ಧಾವಿಸಿದ ಪೋಷಕರು, ಜ್ವರ ಹಾಗೂ ಗಾಯದಿಂದ ಬಳಲುತ್ತಿದ್ದ ಬಾಲಕನನ್ನು ಶಿವಮೊಗ್ಗದ ಪ್ರಸಿದ್ಧ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಪೋಷಕರ ಆಕ್ರೋಶ – ಕ್ರಮಕ್ಕೆ ಆಗ್ರಹ:
ವಿದ್ಯಾರ್ಥಿಯ ಮೇಲೆ ಇಷ್ಟೊಂದು ಕ್ರೂರವಾಗಿ ಹಲ್ಲೆ ನಡೆಸಿರುವ ಶಿಕ್ಷಕನ ವಿರುದ್ಧ ಸುಮಂತ್ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪು ಮಾಡಿದ ಶಿಕ್ಷಕನ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಮತ್ತು ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

No comments:
Post a Comment