ಭೂಮಿ ಹುಣ್ಣಿಮೆಯ ವಿಶೇಷ ಲೇಖನ - ಭಾವನಾ ಉಮಾಪತಿ ನಾಯ್ಕ್ - Kannada global

Breaking

Monday, October 6, 2025

ಭೂಮಿ ಹುಣ್ಣಿಮೆಯ ವಿಶೇಷ ಲೇಖನ - ಭಾವನಾ ಉಮಾಪತಿ ನಾಯ್ಕ್



ಭೂಮಿ ಹುಣ್ಣಿಮೆ.... ಮಲೆನಾಡು ರೈತರ ಸಡಗರದ ಹಬ್ಬ
              (ಭಾವನಾ ಉಮಾಪತಿ ನಾಯ್ಕ್ , ಉತ್ತರ ಕನ್ನಡ)

ವರುಷವಿಡೀ ಹೊಲದಲ್ಲಿ ಉತ್ತಿ ಬಿತ್ತಿ ಜಗತ್ತಿಗೆ ಅನ್ನ ನೀಡುವ ಅನ್ನದಾತನ ಹರುಷದ ಹಬ್ಬ ಈ ಭೂಮಿ ಹುಣ್ಣಿಮೆ.ದಶಮಿಯ ನಂತರ ಬರುವ ಹುಣ್ಣಿಮೆ ಇದಾಗಿದ್ದು,ಇದನ್ನು ಭೂಮಿ ಹುಣ್ಣಿಮೆ ಅಥವಾ ಶೀಗೆ ಹುಣ್ಣಿಮೆ ಎನ್ನುವರು. ವರುಷದಲ್ಲಿ ಹಾಲವಾರು ಹುಣ್ಣಿಮೆಗಳು ಬಂದು ಹೋದರು, ನಮ್ಮ ರೈತ ಮಕ್ಕಳಿಗೆ ಹರುಷ ನೀಡುವ ಹುಣ್ಣಿಮೆ ಈ ಶೀಗೆ ಹುಣ್ಣಿಮೆ.ಯಾಕಿಷ್ಟು ವಿಶೇಷ ಈ ಹುಣ್ಣಿಮೆ?

ಈ ಹುಣ್ಣಿಮೆ ಬರುವುದು ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ. ಆ ಮಾಸದಲ್ಲಿ ರೈತ ಬಿತ್ತಿದ ಬೆಳೆಗಳು ಹಸಿರೋಡೆದು, ಬಸಿರಾಗಿ ನಿಂತಿರುತ್ತವೆ. ಭೂಮಿ ಹೆಣ್ಣಿನ ಸಂಕೇತ. ಒಂದು ಹೆಣ್ಣು ಗರ್ಭವತೆಯಾದಾಗ ಆಕೆಗೆ ಹೇಗೆ ಸೀಮಂತದ ಶಾಸ್ತ್ರ ಮಾಡುವರೋ, ಹಾಗೇ ಭೂ ತಾಯಿಯ ಒಡಲಲ್ಲಿ ಬಸಿರಾಗಿ ನಿಂತ ಪಸಲಿಗೆ ಸೀಮಂತ ಮಾಡುವುದೇ ಈ ಹಬ್ಬದ ವಿಶೇಷತೆ.

ಮಲೆನಾಡು ಜನರ ಭೂಮಿ ಹುಣ್ಣಿಮೆ:

ಮಲೆನಾಡು ಜಿಲ್ಲೆಗಳಾದ ಅತ್ಯಂ; ಅದರಲ್ಲೂ ವಿಶೇಷವಾಗಿ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಈ ಭಾಗದಲ್ಲಿ ಭೂಮಿ ಭೂಮಿ ಹು ಹುಣ್ಣಿಮೆಯ ವಿಶೇಷ ಆಚರಣೆಯನ್ನು ಯನ್ನು ಕಾಣಬಹುದು ಈ ಭಾಗದಲ್ಲಿ ಭೂಮಿ ಹುಣ್ಣಿಮೆ ಬುಟ್ಟಿ ಅಥವಾ ಭೂಮಣ್ಣಿ ಬುಟ್ಟಿ ಎಂಬ ವಿಶೇಶ್ ಕೂಗು ಕೇಳಿ ಬರುತ್ತೆದೆ. ಈ ಭಾಗದ ಹೆಣ ಮಕ್ಕಳಿಗೆ ಭೂಮೆಣ್ಣಿ ಬುಟ್ಟಿ ಚಿತ್ತಾರ ಬಿಡಿಸುವುದೇ ಒಂದ್ ಸಡಗರಬಿದಿರಿನಿಂದ ತಯಾರಿಸಿದ ಬುಟ್ಟಿಗೆ ಕೆಮ್ಮಣ್ಣನ್ನು ಬಳಿದು, ಅಕ್ಕಿ ಹಿಟ್ಟಿನಿಂದ ಅದಕ್ಕೆ ಸುಂದರವಾದ ಚಿತ್ತಾರ ಬಿಡಿಸುತ್ತಾರೆ. ಇದರಲ್ಲಿ ಎರಡು ಬುಟ್ಟಿಗಳನ್ನು ಕಾಣಬಹುದು. ಒಂದು ದೊಡ್ಡ ಬುಟ್ಟಿ, ಮತ್ತೊಂದು ಸಣ್ಣ ಬುಟ್ಟಿ. ದೊಡ್ಡ ಬುಟ್ಟಿ ಚರಗ ಬೀಸಲು, ಸಣ್ಣ ಬುಟ್ಟಿ ಪೂಜೆ ಸಾಮಗ್ರಿ ಹಾಕಲು ಬಳಸುತ್ತಾರೆ.ದಶಮಿಯ ಶುಭ ದಿನ ಈ ಚಿತ್ತಾರ ಬಿಡಿಸುವುದು ಪ್ರಾರಂಭವಾಗುತ್ತದೆ. ಈ ಚಿತ್ತಾರದಲ್ಲಿ ರೈತ ಮಕ್ಕಳ ಜೀವನ ಕ್ರಮವೇ ಅಡಕವಾಗಿರುತ್ತದೆ. ಕೆಮ್ಮಣ್ಣಿನ ಕೆನ್ನೆಗೆ ಬಿಳಿ ಮುತ್ತಿನ ಅಲಂಕಾರದಂತೆ ಕಣ್ ಸೆಳೆಯುತ್ತದೆ ಆ ಚಿತ್ತಾರ.ಹೆಣ್ಣೂಬ್ಬಳ ಕೈಯಿಂದ ಸಿಂಗಾರಗೊಂಡ ಈ ಬುಟ್ಟಿ ಹಬ್ಬದ ಮೆರಗನ್ನು ದುಪ್ಪಟ್ಟು ಮಾಡುವುದೆಂದರೆ ತಪ್ಪಾಗಲಾರದು. ಹುಣ್ಣಿಮೆ ಇರುವುದು ಒಂದೇ ದಿನವಾದರೂ ಹಬ್ಬದ ತಯಾರಿ ಒಂದ್ ವಾರದ್ದಾಗಿರುತ್ತದೆ. ಹಬ್ಬದ ಹಿಂದಿನ ದಿನ ನಮ್ಮ ಹೆಣ್ಣು ಮಕ್ಕಳಿಗೆ ಜಾಗರಣೆ ಎಂದರೆ ತಪ್ಪಾಗಲಾರದು. ಬಸಿರಾಗಿ ನಿಂತ ಭೂ ತಾಯಿಯ ಬಯಕೆ ತೀರಿಸಲು ವಿಧ ವಿಧವಾದ ಭಕ್ಷ -ಭೋಜನಗಳ ತಯಾರಿಯಲ್ಲಿ ಮಗ್ನರಾಗಿರುತ್ತಾರೆ.ವಿಶೇಷವಾಗಿ ಈ ಹಬ್ಬಕ್ಕೆ ಕಡುಬು, ಮೊಸರು ಬುತ್ತಿ, ಪಾಯಸ, ಸಾಸಿವೆ ಚಟ್ಟಿ, ಕೆಸವಿನ ಸೊಪ್ಪಿನ ಪಲ್ಯ, ಹಿರೇಕಾಯಿ ಪಲ್ಯ, ಸೊಪ್ಪಿನ ಪಲ್ಯ ಇನ್ನಿತರ ಸಿಹಿತಿಂಡಿ ಕಜ್ಜಾಯಗಳನ್ನು ಮಾಡುತ್ತಾರೆ.ರೈತ ತಾನೂ ಬೆಳೆದ ಎಲ್ಲಾ ತರಹದ ತರಕಾರಿ, ಸೊಪ್ಪು, ಕಾಯಿ, ಇನ್ನಿತರ ಸಾಮಗ್ರಿಗಳಿಂದ ಚರಗ ತಯಾರಾಗುತ್ತದೆ. ಈ ಹಬ್ಬದಲ್ಲಿ ಚರಗಕ್ಕೆ ವಿಶೇಷ ಸ್ಥಾನವಿದೆ.ಚರಗವೇ ಈ ಭೂಮಿ ಹುಣ್ಣಿಮೆ ಹಬ್ಬದ ಕೇಂದ್ರಬಿಂದು ಎಂದರೆ ತಪ್ಪಾಗಲಾರದು.

ಇದು ಭೂ ತಾಯಿಗೆ ಪ್ರಿಯವಾದ ಖಾದ್ಯ. ತಯಾರಿಸಿದ ಚರಗವನ್ನ ಪೂಜೆ ಮಾಡಿ, ಸಿಂಗರಿಸಿದ ಬುಟ್ಟಿಯಲ್ಲಿ ಚೆರಗ ಹಾಕಿಕೊಂಡು ರೈತ ಮಕ್ಕಳು ತಮ್ಮ ಜಮೀನಿನ ಮೂಲೆ ಮೂಲೆಗೂ ಬೀರುತ್ತಾರೆ. ಮುಂಜಾನೆಯ ಇಬ್ಬನಿಗಳ ಮದ್ಯ "ಹಚ್ಚ0ಬಲೇ ಹರಿಬೇ ಸೊಪ್ಪು ಹಿತ್ತಗಿನ ಹೀರೆ ಕಾಯಿ ಹೊಯ್ ಹೊಯ್ "ಎಂಬ ರೈತನ ಕೂಗು ಕೇಳುವುದೇ ಚೆಂದ.

ಚೆರಗ ಬೀರಿದ ನಂತರ ತಯಾರಿಸಿದ ಭಕ್ಷ-ಭೋಜನದೊಂದಿಗೆ ಕುಟುಂಬ ಸಮೇತರಾಗಿ ಹೊಲಕ್ಕೆ ತೆರಳಿ, ವರುಷದ ಕೂಳು ನೀಡುವ ಭೂ ತಾಯಿಗೆ ಹರುಷದಿ ಪೂಜಿಸಿ, ಮೊದಲ ಎಡೆಯನ್ನು ಗೂಳಿಗೆ ನೀಡುತ್ತಾರೆ(ಗೂಳಿ ಎಂದರೆ ಕಾಗೆ).ಗೂಳಿ ಎಡೆಯನ್ನು ಮುಟ್ಟುವ ತನಕ ಯಾರು ಸಹ ಊಟ ಮಾಡುವುದಿಲ್ಲ. ಯಾಕೆಂದರೆ ಈ ಗೂಳಿಗಳು ಸತ್ತ ಪೂರ್ವಜರ ಸಂಕೇತ ವಾಗಿರುತ್ತವೆ. ಹಿರಿಯರು ಊಟ ಮಾಡುವ ತನಕ ಯಾರು ಊಟ ಮಾಡಬಾರದು ಎಂಬ ವಾಡಿಕೆ ಇದೆ.ಮತ್ತೊಂದು ಕಡುಬುನ್ನು ಇಲಿಗೆಂದು ಗದ್ದೆಯೆ ಒಂದು ಭಾಗದಲ್ಲಿ ಹುಗಿಯುತ್ತಾರೆ.ಇಲಿಗಳು ಗದ್ದೆಯನ್ನು ಹಾಳು ಮಾಡದಿರಲಿ ಎಂಬ ಕಾರಣಕ್ಕೆ ಪಸಲು ಕಾಟವಿನ ದಿನ ಆ ಕಡುಬುನ್ನು ತೆಗೆದು ಪ್ರಸಾದದಂತೆ ಎಲ್ಲರಿಗೂ ಹಂಚುತ್ತಾರೆ.ಹಬ್ಬದ ದಿನ ಎಲ್ಲರೂ ಒಟ್ಟಿಗೆ ಸಂತೋಷದಿಂದ ಹೋಲದಲ್ಲಿಯೇ ಊಟ ಮಾಡಿ ಭೂ ತಾಯಿಯ ಪೂಜೆಗೆ ಏರಿಸಿದ ಹಣ್ಣು ನೂಲನ್ನು ಕೈಗೆ ಕಟ್ಟಿಕೊಳ್ಳುತ್ತಾರೆ. ಇಲ್ಲಿಗೆ ರೈತ ಮಕ್ಕಳ ಸಡಗರದ ಹಬ್ಬ ಒಂದು ಹಂತಕ್ಕೆ ಮುಗಿಯುತ್ತದೆ.

ಏನಿದು ಹಣ್ಣು ನೂಲು?

ಭೋತಾಯಿಯ ಪೂಜೆಗೆ ಏರಿಸಿದ ಹಳದಿ ಬಣ್ಣದ ನೂಲೆ ಈ ಹಣ್ಣು ನೂಲು.
ಇದನ್ನು ಮನೆಯ ಹಿರಿಯ ಕಟ್ಟಿ ಕೊಳ್ಳುತ್ತಾನೆ.ಬಸಿರಾಗಿ ನಿಂತ ಈ ಪಸಲಿನ ರಕ್ಷಣೆ ನನ್ನ ಹೊಣೆ ಎಂದು ಕಂಕಣವನ್ನು `ಕಟ್ಟಿಕೊಳ್ಳುತ್ತಾನೆಪಸಲು ಕಟಾವಿನ ನಂತರ ಒಕ್ಕಲಾದ ಮೇಲೆ ಆ ಕಂಕಣ ಬಿಚ್ಚಿ ನಿನ್ನ ರಕ್ಷಣೆಯನ್ನು ನಾನು ಯಶಸ್ವಿಯಾಗಿ ಮಾಡಿದ್ದೇನೆ ಎಂದು ಗೊಣವೆಯ ಮೇಲೆ ಹಾಕುತ್ತಾನೆ. ಇಲ್ಲಿಗೆ ಒಕ್ಕಲು ಮಕ್ಕಳ ಸಡಗರದ ಹಬ್ಬ ಮುಕ್ತಾಯವಾಗುತ್ತದೆ.

No comments:

Post a Comment

Advertisement

ಜಾಹೀರಾತು ಹಾಗೂ ಸುದ್ದಿ ನೀಡಲು ಸಂಪರ್ಕಿಸಿ

📞 9110857339 ಗೆ ಕರೆ ಮಾಡಿ 💬 WhatsApp ಗ್ರೂಪ್ ಸೇರಿ 🎥 YouTube ಚಂದಾದಾರರಾಗಿ

ಕನ್ನಡ ಗ್ಲೋಬಲ್ ನ್ಯೂಸ್